Skip to main content

ಅರುಣಾಚಲ ಕ್ಷೇತ್ರದ ಆರನೇ ಬಾರಿಯ ಪರಿಕ್ರಮ


ಅರುಣಾಚಲ ಕ್ಷೇತ್ರದ ಆರನೇ ಬಾರಿಯ ಪರಿಕ್ರಮ

ಯಥಾಪ್ರಕಾರ ಹೊಸ ಮಾಸವು ಹುಟ್ಟಿತೆಂದ ಕೂಡಲೇ ನನ್ನ ಮನಸ್ಸಿಗೆ ಹೊಳೆಯುವುದು ಹುಣ್ಣಿಮೆ ಎಂದು, ಹೇಗೆ ತಿರುವಣ್ಣಾಮಲೈ ಕ್ಷೇತ್ರದ ಪರಿಕ್ರಮವನ್ನು ಸಂಪನ್ನಗೊಳಿಸುವುದು ಹಾಗೂ ಜೊತೆಗೆ ಯಾರನ್ನು ಕರೆದೊಯ್ಯುವುದು ಎಂಬ ವಿಷಯದ ಬಗ್ಗೆ. ಆದರೆ ಫೆಬ್ರವರಿ ತಿಂಗಳಿನ ಪರಿಕ್ರಮದ ಕಾರ್ಯಕ್ರಮಕ್ಕೆ ಈ ಸಮಸ್ಯೆಯು ಉಂಟಾಗಲೇ ಇಲ್ಲ. ಏಕೆಂದರೆ ಪರಿಕ್ರಮವನ್ನು ಮಾಡಲು ಕಾಲೇಜಿನ ನನ್ನ ಸಹಪಾಠಿ ಶ್ರೀ.ರವೀಂದ್ರನ ಸರದಿ ಇದ್ದೇ ಇತ್ತು. ಇದರೊಂದಿಗೆ ನನ್ನ ಸಹೋದ್ಯೋಗಿ ಶ್ರೀ.ಶ್ರೀಕಾಂತ್ ಕೊಲ್ಹಾರ ಅವರೂ ಬರಲು ಒಪ್ಪಿಕೊಂಡರು. ಈ ಮಾಸದ ಪರಿಕ್ರಮವನ್ನು ನಾವು ಶುಕ್ಲಪಕ್ಷದ ಬಿದಿಗೆಯ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಮಾಡಲು ಅಲೋಚಿಸಿದ್ದೆವು. ಅದರಂತೆ ಪಾಡ್ಯದ ದಿನ ಮಧ್ಯಾನ್ಹ 12 ಕ್ಕೆ ಬೆಂಗಳೂರಿನಿಂದ ಸಾರಿಗೆ ಬಸ್ಸಿನಲ್ಲಿ ಕುಳಿತು ಪಯಣಿಸಿ ಸಂಜೆ 6.30ಕ್ಕೆ ತಿರುವಣ್ಣಾಮಲೈಯನ್ನು ತಲುಪಿದೆವು. ಮುಂಚಿತವಾಗಿಯೇ ಕಾಯ್ದಿರಿಸಿದ್ದ ಒಂದು ಒಳ್ಳೆಯ ಹೋಟೆಲಿಗೆ ಹೋಗಿ ಸ್ನಾನವನ್ನು ಮುಗಿಸಿ ಅಲ್ಲಿಂದ ಅರುಣಾಚಲನ ದರ್ಶನಕ್ಕೆ 7.30ಕ್ಕೆ ಹೋದೆವು. ನನ್ನೊಂದಿಗೆ ಬಂದಿದ್ದ ಇಬ್ಬರಿಗೂ ದೇವಸ್ಥಾನದ ಬಗ್ಗೆ ವಿವರಗಳನ್ನು ತಿಳಿಸಿದೆ. ಅದರಲ್ಲಿ ಮುಖ್ಯವಾದದ್ದುಪಾತಾಳ ಲಿಂಗ” - ಇಲ್ಲೇ ಸುಮಾರು 16 ವರ್ಷ ಪ್ರಾಯದ ರಮಣ ಮಹರ್ಷಿಗಳು (ಆಗಿನ ನಾಮಧೇಯ - ವೆಂಕಟರಮಣ) ದೇಹದ ಮೇಲಿನ ವಸ್ತ್ರದ ಸಹಿತ ಎಲ್ಲವನ್ನೂ ವರ್ಜಿಸಿ ಅವಧೂತನಂತೆ 10 ದಿನಗಳ ಪರ್ಯಂತ ಲೋಕದ ಗೊಡವೆಯಿಲ್ಲದೇ ನಿದ್ರಾಹಾರದ ಬಗೆಗೆ ನಿರಾಸಕ್ತಿಯನ್ನು ಹೊಂದಿ, ಹಾಗೂ ಕ್ರಿಮಿ ಕೀಟಗಳ ಬಾಧೆಯನ್ನು ಲೆಕ್ಕಿಸದೇ ಸಮಾಧಿಸ್ಥಿತಿಯಲ್ಲಿದ್ದದ್ದು. ಈ ವಿಷಯವನ್ನು ವಿವರಿಸಿ, ಅಲ್ಲಿಂದ ಕಾಲಭೈರವನ ಮಂದಿರಕ್ಕೆ ಹೋಗಿ ನಂತರ ಅರುಣಾಚಲೇಶ್ವರನ ದರ್ಶನವನ್ನು ಪಡೆದೆವು. ಅದರ ನಂತರ ಅಪಿತ ಕುಚಾಂಬ (ಪಾರ್ವತಿ) ಅಮ್ಮನವರ ದರ್ಶನವನ್ನು ಮಾಡಿಕೊಂಡು ಅಲ್ಲಿನ ಪ್ರಾಂಗಣದಲ್ಲೇ ಕುಳಿತು ಶಂಕರಭಾಗವತ್ಪಾದರು ರಚಿಸಿರುವರಾಜರಾಜೇಶ್ವರಿ ಅಷ್ಟಕವನ್ನು ಸ್ತುತಿಸಿ ನಂತರ ಕಾಲಭೈರವನ ಮುಂದೆ ಬಂದು ಕಾಲಭೈರವಾಷ್ಟಕವನ್ನು ಸ್ತುತಿಸಿ ಹೊರಬಂದು ರಾತ್ರೆಯ ಫಲಾಹಾರವನ್ನು ಸೇವಿಸಿ ಹೊಟೇಲಿಗೆ ಹೋಗಿ ನಿದ್ರಾದೇವಿಯ ತೋಳ್ತೆಕ್ಕೆಯಲ್ಲಿ ಸೇರಿಕೊಂಡೆವು. ಬೆಳಗಿನ ಝಾವ 4 ಘಂಟೆಗೆ ಎದ್ದು ಸ್ನಾನಾದಿಗಳನ್ನು ಮುಗಿಸಿಕೊಂಡು ಬ್ರಾಹ್ಮಿಮುಹೂರ್ತದಲ್ಲಿ ಬಿದಿಗೆ ಚಂದ್ರನ ಬೆಳದಿಂಗಲಿನಲ್ಲಿ ಪರಿಕ್ರಮವನ್ನು ಪ್ರಾರಂಭಿಸಿ ಮಾರ್ಗದಲ್ಲಿ ಕ್ರಮವಾಗಿ ಇಂದ್ರ, ಅಗ್ನಿ, ಯಮ, ನೈರುತ್ತಿ, ಸೂರ್ಯ, ವರುಣ, ವಾಯು, ಚಂದ್ರ, ಕುಬೇರ ಹಾಗೂ ಈಶಾನ್ಯ ಲಿಂಗಗಳನ್ನು ದರ್ಶಿಸಿ ಹಾಗೂ ವರುಣ ಹಾಗೂ ವಾಯುಲಿಂಗಗಳ ನಡುವೆ ಇರುವ ಆದಿ ಅಣ್ಣಾಮಲೈ ದೇವಸ್ಥಾನವನ್ನು ದರ್ಶಿಸಿದೆವು. ನೈರುತ್ತಿ ಲಿಂಗದ ಬಳಿ ಬಂದಾಗ, ನಾನು ಶ್ರೀಕಾಂತನಿಗೆ ಆ ಸ್ಥಳದಲ್ಲಿ ನಡೆದ ಮುಖ್ಯ ಘಟನೆಯಾದ ಕಾರ್ತಿಕ ಮಾಸದಲ್ಲಿ ಗಣಪತಿ ಮುನಿಗಳ ತಪಸ್ಸಿನಾಚಾರಣೆ ಹಾಗೂ ಕಾರ್ತಿಕ ಶುಕ್ಲ ಚತುರ್ದಶಿಯ ದಿನ (18-11-1907)ರಂದು ಅರುಣಾಚಾಲನ ಅನುಜ್ಞೆಯ ಮೇರೆಗೆ ಇಲ್ಲಿಂದಲೇ ಹೇಗೆ ಗಣಪತಿ ಮುನಿಗಳು ಬೆಟ್ಟವನ್ನೇರಿ ಮೌನಿ ಸ್ವಾಮಿಯನ್ನು ಸಂಧಿಸಿ ಅವರಲ್ಲಿ ಶರಣಾಗಿ ಉಪದೇಶವನ್ನು ಪಡೆದರು ಹಾಗೂ ಮೌನಿ ಸ್ವಾಮಿಗೆ ಭಗವನ್ ಶ್ರೀರಮಣ ಮಹರ್ಷಿಗಳೆಂದು ಹೊಸ ಹೆಸರನ್ನು ಘೋಷಿಸಿದರು ಎಂಬ ವಿಷಯಗಳನ್ನು ವಿವರಿಸಿದೆ. ಅನಂತರ ಮುಂಜಾನೆ 9.15ಕ್ಕೆ ವಿರೂಪಾಕ್ಷ ಗುಹೆಯ ಮಾರ್ಗವನ್ನು ತಲುಪಿದೆವು. ಇಲ್ಲಿಂದ ವಿರೂಪಾಕ್ಷ ಗುಹೆಗೆ ಸುಮಾರು ಏಳುನೂರು ಸಣ್ಣ ಪುಟ್ಟ ಮೆಟ್ಟಲುಗಳನ್ನು ಹತ್ತಿದರೆ ನಮಗೆ ಸಿಗುವುದೇ ವಿರೂಪಾಕ್ಷ ಗುಹೆ.

ಬೆಟ್ಟ ಹತ್ತುವ ಮಾರ್ಗದಲ್ಲೇ ನಮಗೆ ಮಾವಿನ ಮರಗಳ ತೋಪಿನಲ್ಲಿರುವ ಗುಹೆಯೊಂದು ಸಿಗುವುದು. ನಾನು ನನ್ನೊಂದಿಗೆ ಬಂದಿದ್ದ ಇಬ್ಬರು ಸಹಚಾರಣಿಗರಿಗೂ ಆ ಗುಹೆಯ ಮಹತ್ವವನ್ನು ವಿವರಿಸಿದೆ. ಅದೇನೆಂದರೆ ಇದೇ ಗುಹೆಯಲ್ಲಿ ಉಮಾದೇವಿಯು ಕಾವ್ಯಕಂಠ ಗಣಪತಿ ಮುನಿಗಳಿಗೆ ದರ್ಶನವನ್ನಿತ್ತದ್ದು ಹಾಗೂ ಉಮಾಸಹಸ್ರಮ್ ಕೃತಿಯನ್ನು ರಚಿಸಲು ಅಜ್ಞಾಪಿಸಿದ್ದು ಅಲ್ಲದೇ 1921ರಲ್ಲಿಉಮಾಸಹಸ್ರಮ್ಕೃತಿಯನ್ನು ರಚಿಸಿದ್ದು ಹಾಗೂ ಆ ಸಮಯದಲ್ಲಿ ದೇವಿಯು ನಡೆಸಿದ ಪವಾಡ ಮತ್ತು 1922 ರಲ್ಲಿ ಗಣಪತಿಮುನಿಗಳಿಗೆ ಕಪಾಲ ಭೇದನವು ಸಿದ್ಧಿಸಿದ್ದು ಹಾಗೂ ಆಗ ಅವರಿಗೆ ಉಂಟಾದ ಅನುಭವಗಳನ್ನು ವಿವರಿಸಿದೆ. ಅನಂತರ ನಾವುಗಳು ಐದು ನಿಮಿಷಗಳ ಚಾರಣದ ನಂತರ ವಿರೂಪಾಕ್ಷ ಗುಹೆಯನ್ನು ತಲುಪಿ ಅಲ್ಲಿ ಸ್ವಲ್ಪಹೊತ್ತು ಕುಳಿತಿದ್ದು ಮರಳಿ ಬೆಟ್ಟವನ್ನಿಳಿಯುವಾಗ ವಿರೂಪಾಕ್ಷ ಗುಹೆಯಲ್ಲಿನ ರಮಣ ಮಹರ್ಷಿಗಳ ಹದಿನೇಳು ವರ್ಷಗಳ ವಾಸ್ತವ್ಯದಲ್ಲಿ ನಡೆದ ಕೆಲವು ಮುಖ್ಯ ಘಟನೆಗಳಾದ ಗಣಪತಿ ಮುನಿ ಹಾಗೂ ರಮಣ ಮಹರ್ಷಿಗಳ ಭೇಟಿ, ಗಣಪತಿ ಮುನಿಗಳಿಗೆ ರಮಣ ಮಹರ್ಷಿಗಳಿಂದ ಉಪದೇಶ, ಗಣಪತಿ ಮುನಿಗಳಿಗೆ ಉಮಾದೇವಿಯ ಅನುಗ್ರಹ ಇತ್ಯಾದಿ ವಿಷಯಗಳನ್ನು ನನ್ನೊಂದಿಗೆ ಬಂದಿದ್ದ ಶ್ರೀಕಾಂತ್ ಅವರಿಗೆ ವಿವರಿಸಿದೆ.
ಬೆಟ್ಟವನ್ನಿಳಿದು ಮತ್ತೊಮ್ಮೆ ಅರುಣಾಚಲ ಮಂದಿರಕ್ಕೆ ಹೋಗಿ ದರ್ಶನದ ನಂತರ ಮಂದಿರದ ಪ್ರಾಕಾರದಲ್ಲಿರುವ ಒಂದು ಮಂಟಪದಲ್ಲಿ ನಾನು ಹಾಗೂ ರವಿಂದ್ರ ಇಬ್ಬರೂ ಕುಳಿತು ಸುಮಾರು 45 ನಿಮಿಷಗಳಲ್ಲಿ ರುದ್ರ-ಚಮಕಗಳನ್ನು ಪಠಿಸಿದೆವು. ಅನಂತರ ಹೊರಬಂದು ಒಂದು ಹೋಟೆಲಿನಲ್ಲಿ ಊಟಮಾಡಿ 2 ಘಂಟೆಗೆ ಬೆಂಗಳೂರಿನೆಡೆಗೆ ಪಯಣಿಸಿದೆವು.



Comments

Popular posts from this blog

ಕರ್ದಲೀ ವನ - ಒಂದು ಪರಿಚಯಾತ್ಮಕ ಲೇಖನ

ಕರ್ದಲೀ ವನ - ಒಂದು ಪರಿಚಯಾತ್ಮಕ ಲೇಖನ ಕರ್ದಲೀ ಬನವು ವಿಶ್ವ ಗುರು ದತ್ತಾತ್ರೇಯರ ಹಾಗೂ ಸಮರ್ಥ ರಾಮದಾಸರ ಪವಿತ್ರವಾದ ಹಾಗೂ ರಹಸ್ಯ ಕ್ಷೇತ್ರ . ಒಂದು ನಂಬಿಕೆಯ ಪ್ರಕಾರ ಹತ್ತು ಸಾವಿರ ಜನಗಳಲ್ಲಿ ಒಬ್ಬನಿಗೆ ಕಾಶಿ - ಪ್ರಯಾಗಗಳಿಗೆ ಭೇಟಿನೀಡುವ ಅವಕಾಶಗಳು ಒದಗಿದರೆ , ಇಪ್ಪತ್ತೈದು ಸಾವಿರದಲ್ಲಿ ಒಬ್ಬನಿಗೆ ಬದರಿ - ಕೇದಾರಗಳಿಗೆ , ಒಂದು ಲಕ್ಷದಲ್ಲಿ ಒಬ್ಬನಿಗೆ ನರ್ಮದಾ ಪರಿಕ್ರಮಕ್ಕೆ ಅವಕಾಶ ಸಿಕ್ಕರೆ , ಹತ್ತು ಲಕ್ಷದಲ್ಲಿ ಒಬ್ಬನಿಗೆ ಕೈಲಾಸ - ಮಾನಸ ಸರೋವರ ಪರಿಕ್ರಮಕ್ಕೆ ಅವಕಾಶ ಸಿಕ್ಕರೆ ಐದು ಲಕ್ಷಕ್ಕೆ ಒಬ್ಬನಿಗೆ ಸ್ವರ್ಗಾರೋಹಿಣಿಯೆಡೆಗೆ ಪಯಣಿಸಲು ಅವಕಾಶ ಸಿಗಬಹುದು . ಇದೆಲ್ಲಕ್ಕಿಂತ ಅತಿ ವಿರಳವಾದ ಹಾಗೂ ಪವಿತ್ರವಾದ ಆಧ್ಯಾತ್ಮಿಕ ಚಾರಣವೊಂದಿದೆ . ಅದೇ ಕರ್ದಳೀವನ ಪರಿಕ್ರಮ . ಕೋಟಿಗೊಬ್ಬ ಅದೃಷ್ಟವಂತನಿಗೆ ಈ ಕ್ಷೇತ್ರದ ಪರಿಕ್ರಮ ಮಾಡಲು ಅವಕಾಶವು ಲಭ್ಯವಾಗುವುದು . ಇದಕ್ಕೆ ಮುಖ್ಯ ಕಾರಣವೆಂದರೆ ಈ ಕ್ಷೇತ್ರವು ಅತಿ ನಿರ್ಜನ ಹಾಗೂ ಸಾಮಾನ್ಯ ಪ್ರಪಂಚದಿಂದ ಬಹು ದೂರದಲ್ಲಿರುವುದು . ಈ ಧಾರ್ಮಿಕ ಚಾರಣದಲ್ಲಿ ಬೇರೆಯದೇ ಆದ ಪ್ರಪಂಚದ ಅನುಭವ ಹಾಗೂ ಧಾರ್ಮಿಕ ತರಂಗಗಳ ಅನುಭವಗಳು ಎದುರಾಗುವುದು . ಕೇವಲ 2 - 3 ವರ್ಷಗಳಿಗೆ ಮುಂಚೆ ಈ ಕ್ಷೇತ್ರವು ಗುಪ್ತ ಕ್ಷೇತ್ರವಾಗಿದ್ದು ಇತ್ತೀಚಿನ ದಿನಗಳಲ್ಲಿ ಇದರ ಧಾರ್ಮಿಕ ಮಹತ್ವವು ಹಲವರಿಗೆ ತಿಳಿಯತೊಡಗಿ ಇಲ್ಲಿಗೆ ಧಾರ್ಮಿಕ ಚಾರಣಿಗರು ಬರತೊಡಗಿದ್ದಾರೆ . ಭಾರತದಲ್ಲಿ ಬಹು ಮುಖ್ಯವಾಗಿ ...

ಎರಡನೇಬಾರಿಯ ಕೇದಾರಕಾಂತ ಶಿಖರಾರೋಹಣದ ಅನುಭವಗಳು

ಎರಡನೇಬಾರಿಯ ಕೇದಾರಕಾಂತ ಶಿಖರಾರೋಹಣದ ಅನುಭವಗಳು ಫೆಬ್ರವರಿ ತಿಂಗಳಿನಲ್ಲಿ ಬಿ.ವಿ.ರಮೇಶ್ ಹಾಗೂ ವೆಂಕಣ್ಣ ಆಚಾರ್ಯ ರವರೊಂದಿಗೆ ಪಶ್ಹಿಮ ಬಂಗಾಳದಲ್ಲಿನ ಸಂಡಕ್ಫೂ ಶಿಖರಾರೋಹಣ ಮಾಡುವ ಮೊದಲೇ ನನ್ನ ಗುಜರಾತ್ ರಾಜ್ಯದಲ್ಲಿನ ಕಛ್ ಪ್ರವಾಸದಲ್ಲಿ ಜಯಂತ್ ರವರಿಗೆ ಮಾತು ಕೊಟ್ಟಂತೆ ಏಪ್ರಿಲ್ ತಿಂಗಳಿನಲ್ಲಿ ಕೇದಾರ್ಕಾಂತ ಶಿಖರಾರೋಹಣ ಮಾಡಲು ತೀರ್ಮಾನಿಸಿ ಅದರಂತೆ ಜನವರಿ ತಿಂಗಳಿನಲ್ಲೇ ಇಂಡಿಯಾ ಹೈಕ್ ರವರಲ್ಲಿ ನನಗೆ ಹಾಗೂ ಶ್ರೀಕಾಂತ್ ಕೊಲ್ಹಾರ ರಿಗೆ ಸ್ಥಳವನ್ನು ಕಾಯ್ದಿರಿಸಿದ್ದೆ. ಹಾಗೂ ಜಯಂತ್ ರವರೂ ಕೂಡ ತಮ್ಮ ಸ್ಥಳವನ್ನು ಕಾದಿರಿಸಿದ್ದರು. ಅದರಂತೆ ನಾನು ಹಾಗೂ ಶ್ರೀಕಾಂತ್ ಮೊದಲೇ ಪ್ರಯಾಣಕ್ಕೆ ಸಂಬಂದಿಸಿದಂತೆ ರೈಲಿನಲ್ಲಿ ಟಿಕೆಟ್ ನ್ನು ಬುಕ್ ಮಾಡಿದ್ದೆವು. ಸ್ವಲ್ಪ ದಿನದ ನಂತರ ನಾವಿಬ್ಬರೂ ಏಪ್ರಿಲ್ ನಲ್ಲೇ ಅಮೆರಿಕ ಪ್ರಯಾಣಮಾಡಬೇಕಾದ ಸಂದರ್ಭ ಬಂದಿದ್ದರಿಂದ ನವದೆಹಲಿಗೆ ರೈಲಿನಲ್ಲಿ ಹೋಗುವ ಬದಲು ವಿಮಾನದಲ್ಲಿ ಪ್ರಯಾಣಿಸಲು ತೀರ್ಮಾನಿಸಿ ಅದರಂತೆ ಟಿಕೆಟ್ ನ್ನು ಬುಕ್ ಮಾಡಿದೆವು. ಅನಂತರ ಫೆಬ್ರವರಿ ತಿಂಗಳಿನಲ್ಲಿ ನನ್ನ ತಮ್ಮ ಅನಂತಮೂರ್ತಿಯ ಮನೆಗೆ ಹೋಗಿದ್ದಾಗ ಈ ವಿಷಯವನ್ನು ತಿಳಿಸಿದಾಗ ಅವನೂ ತಾನು ಹಾಗೂ ಉಮಾ ಸಹ ನಮ್ಮ ಜೊತೆಗೆ ಬರಲು ತೀರ್ಮಾನಿಸಿದರು. ಅದರಂತೆ ಅವರಿಗೂ ಇಂಡಿಯಾ ಹೈಕ್ ನಲ್ಲಿ ಮತ್ತೆರಡು ಸ್ಥಳಗಳನ್ನು ಬುಕ್ ಮಾಡಿ ಡೆಹರಾಡೂನಿಗೆ ಹೋಗಿಬರುವ ಪ್ರಯಾಣವನ್ನು ಬುಕ್ ಮಾಡಿದೆವು. ಅನಂತರ ಮೂರ್ತಿ ಹಾಗೂ ಉಮ...

ಅಲೆಮಾರಿ ಆತ್ಮಗಳ ಅಲೆದಾಟದ ಅದ್ಭುತ ಅನುಭವಗಳು

ಅಲೆಮಾರಿ ಆತ್ಮಗಳ ಅಲೆದಾಟದ ಅದ್ಭುತ ಅನುಭವಗಳು ಚಾರಣದ ಉದ್ದೇಶ, ಸವಾಲುಗಳು ಹಾಗೂ ಪ್ರತ್ಯಕ್ಷ ವೀಕ್ಷಣೆ   ನಿಮಗೆ ಗೊತ್ತಿರುವ ಸ್ಥಳದಿಂದ ದೂರಹೋಗಿ ಅಲ್ಲಿಯ ಹೊಸ ಹಾದಿಯನ್ನು, ಮತ್ತಿಷ್ಟು ಹಾದಿಯನ್ನು ಕ್ರಮಿಸಿ, ಅತ್ಯಂತ ರಮಣೀಯವಾದ ಪ್ರಕೃತಿ ಸಂಪತ್ತನ್ನು ಪತ್ತೆಹಚ್ಚುವುದಕ್ಕೋಸ್ಕರ ಚಾರಣ ಮಾಡಬೇಕು.  ನೀವು ಅನುಭವಿ ಅಥವಾ ಆರಂಭಿಕ ಚಾರಣಿಗರೇ ಆಗಿದ್ದರೂ ಚಾರಣವು ಒಡ್ಡುವ ಸವಾಲುಗಳನ್ನು ಎದುರಿಸಿ ಆನಂದಿಸುವ ಅವಕಾಶಗಳನ್ನು ನೀಡುತ್ತದೆ.  ಎಲ್ಲೋ ಯಾವುದೋ ಪುಸ್ತಕದಲ್ಲಿ ಓದಿರಬಹುದಾದ ಅಥವಾ ಸಾಕ್ಷ್ಯ ಚಿತ್ರಗಳಲ್ಲಿ ನೋಡಿದ, ಪ್ರತ್ಯಕ್ಷವಾಗಿ ವೀಕ್ಷಿಸಬೇಕೆಂದು ಕನಸು ಕಂಡಿರಬಹುದಾದ ಸ್ಥಳಗಳಿಗೆ ಹೋಗಿ ಅಲ್ಲೆಲ್ಲಾ ಸುತ್ತಾಡಿ ಆನಂದಿಸುವ ಅವಕಾಶಗಳನ್ನು ಚಾರಣವು ಒದಗಿಸುತ್ತದೆ.  ಚಾರಣದಲ್ಲಿ ನಮ್ಮನ್ನು ಮತ್ತೊಮ್ಮೆ ಕಂಡುಕೊಳ್ಳುವ ಅವಕಾಶವೂ ದೊರಕುತ್ತದೆ. ಯಾವುದೇ ಹಿಂಜರಿಕೆಯ ಸೋಗಿಲ್ಲದೆ ಕಂಡರಿಯದ ಹಾದಿಯಲ್ಲಿ ನಿಮ್ಮನ್ನು ನೀವು ಮತ್ತೊಮ್ಮೆ ಹುಡುಕಿಕೊಳ್ಳಲು ಚಾರಣವು ಸಂದರ್ಭವನ್ನು ಒದಗಿಸುತ್ತದೆ.  ಚಾರಣವು ಒಂದು ಸಾಮೂಹಿಕ ಚಟುವಟಿಕೆ ಹಾಗೂ ಈ ಹವ್ಯಾಸವು ನಿಮ್ಮಲ್ಲಿನ ದೈಹಿಕ ಶಕ್ತಿಯನ್ನು ಅಭಿವ್ಯಕ್ತಿಸುತ್ತದೆ.  ಚಾರಣವು ರಮ್ಯವಾದ ಪ್ರಕೃತಿಯ ನಡುವೆ ಸುಂದರವಾದ ಸಮುದಾಯ ಹುಟ್ಟಿಕೊಳ್ಳುತ್ತದೆ ಅಲ್ಲದೆ ಹೊಸ ಹೊಸ ಗೆಳೆಯರನ್ನು ಸಂಪಾದಿಸುವ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ ಹಾಗೂ ನೀವು ಕ್...